Saturday, September 19, 2009

ನ್ಯಾನೋ ಕಥೆಗಳು.

1) "ಕರ್ತವ್ಯಂ ದೈವಮಾಹ್ನಿಕಂ " ಎಂದುಕೊಂಡು ಸದಾ ಕಾಲ ಆಫೀಸ್ ಕೆಲಸದಲ್ಲೇ ತೊಡಗಿರುತ್ತಿದ್ದ ಸಾಫ್ಟವೇರ್ ಇಂಜಿನಿಯರ್ ನ ಹಾಲುಗಲ್ಲದ ಪುಟ್ಟ ಮಗು ಅವನನ್ನು ತೋರಿಸಿ "ಅಮ್ಮಾ ....... ಇವರು ಯಾರು ??" ಎಂದು ಕೇಳಿದಾಗ ಅವನಿಗೆ ನಿಜವಾದ ಕರ್ತವ್ಯದ ಅರಿವಾಯಿತು .


2) ಜ್ಯೋತಿಷ್ಯ ಶಾಸ್ತ್ರವನ್ನು ಅರೆದು ಕುಡಿದು ಸೂರ್ಯ - ಚಂದ್ರ - ಗ್ರಹತಾರೆಗಳನ್ನು ಕರತಲಾಮಲಕ ಮಾಡಿಕೊಂಡಿದ್ದ ಸುಬ್ಬಯ್ಯ ಶಾಸ್ತ್ರಿಗಳಿಗೆ ಅವರ ಮಗಳು ಪ್ರಿಯಕರನೊಂದಿಗೆ ಓಡಿ ಹೋಗುವ ವಿಚಾರವನ್ನು ಈ ಆಕಾಶಕಾಯಗಳು ಹೇಳಲೇ ಇಲ್ಲ !!!!.


3) ಮನುಷ್ಯನಿಗೆ ಶೀತವಾಗಲು ಶುರುವಾಗಿದ್ದು ಕೊಡೆ ಕಂಡುಹಿಡಿದ ಮೇಲೆ !!!!

4) ಬೀರುವಿನೊಳಗಿನ ರೇಷ್ಮೆ ಸೀರೆಗಳನ್ನೆಲ್ಲ ಇಲಿ ಕೊಚ್ಚಿ ಹಾಕಿದಾಗ ಕೊಂಚವೂ ಬೇಸರಿಸದ ಕಾವೇರಮ್ಮ ಮಗ ತಂದುಕೊಟ್ಟ ಇನ್ನೂರು ರುಪಾಯಿಯ ಕಾಟನ್ ಸೀರೆಯ ಮೇಲೆ ಸುಕ್ಕು ಬಿದ್ದಾಗ ಬಿಕ್ಕಿ ಬಿಕ್ಕಿ ಅತ್ತಳು .

5) ಅಂಗವಿಕಲರಿಗೆ ಸರಕಾರ ಕೊಡುವ ಸಹಾಯಧನವನ್ನು ಪಡೆಯಲು ತೆವಳಿಕೊಂಡು ಬಂದ ಅಭ್ಯರ್ಥಿಗೆ ಅಧಿಕಾರಿಗಳು ಅಂಗವಿಕಲತೆಯ ಸರ್ಟಿಫಿಕೆಟ್ ಇಲ್ಲದೇ ಹಣ ಮಂಜೂರು ಮಾಡಲಾಗುವುದಿಲ್ಲ ಎಂದರು .


6) ಕದಳಿಯೋಳು ಮದದಾನೆ ಹೊಕ್ಕಂತೆ ನೂರು ಜನ ಶತ್ರುಗಳ ಚಕ್ರವ್ಯೂಹಕ್ಕೆ ನುಗ್ಗಿ ಅದನ್ನು ಧ್ವಂಸಗೈದು ಕ್ಲೈಮ್ಯಾಕ್ಸ್ ನಲ್ಲಿ ನಾಯಕಿಯ ಮಾನ ಕಾಪಾಡಿದ ಹೀರೊನನ್ನು ಕಳ್ಳರು ನಡುರಸ್ತೆಯಲ್ಲಿ ಖಾಲಿ ಪಿಸ್ತೂಲ್ ತೋರಿಸಿ ದೋಚಿದರು .

7) ಮಾರುಕಟ್ಟೆಯಲ್ಲಿ ಎದುರು ಸಿಕ್ಕಾಗ ನೋಡಿಯೂ ನೋಡದವನಂತೆ ಮುಖ ಹೊರಳಿಸಿ ಹೋದ ಗೆಳೆಯನು ಮನೆಗೆ ಹೋಗಿ "Hi dude !!! Whatsup ??? ಎಂದು ಆರ್ಕುಟ್ ನಲ್ಲಿ ಸ್ಕ್ರಾಪ್ ಮಾಡಿದನು .

8) " ಅಲೆಲೆ .. ಮುದ್ದುಮಲೀ ಹೊತ್ತೆ ನೋವಾ ??? " ಎಂದು ತಮ್ಮ ಪಾಪುವನ್ನು ಉಪಚರಿಸಿದ ಡಾಕ್ಟರನ್ನು ಕಂಡು ಮಗುವಿನೊಂದಿಗೆ ಮಗುವಾಗಿ ನಡೆದುಕೊಳ್ಳುತ್ತಾರೆ ಎಂದು ಸಂತೋಷಪಟ್ಟ ಹೆತ್ತವರು ಕೊನೆಗೆ ಡಾಕ್ಟರು " ನಾಲ್ಕು ಗುಲಿಗೆ ಬಲೆದು ಕೊತ್ತೀನಿ .. ಬೆಳಿಗ್ಗೆ ಮತ್ತು ಲಾತ್ಲಿ ಕೊದಿ " ಎಂದಾಗ ಕಂಗಾಲಾದರು .


9) ಆತ್ಮಹತ್ಯೆಗೆ ಪ್ರಯತ್ನಿಸಿ ಕಲಬೆರಕೆ ವಿಷದಿಂದ ಸಾಯದೆ ಹೋದ ರೈತನು ಆಸ್ಪತ್ರೆಯಲ್ಲಿ ಕೊಟ್ಟೆ ಕಲಬೆರಕೆ ಔಷಧದಿಂದ ಸತ್ತ .

10) ಸೀರೆ ತರುವುದನ್ನು ಮರೆತೆ ಎಂದು ಗಂಡ ಹೇಳಿದಾಗ " ನೀವೂ ಮನುಷ್ಯರಾ ?? ಎಂದು ಗುಡುಗಿದ ಮಡದಿ , ಗಂಡ ಅಡಗಿಸಿಟ್ಟಿದ್ದ ಸೀರೆ ಹೊರ ತೆಗೆದಾಗ "ಅಲ್ಲ ದೇವರು !!! ದೇವರು !!! " ಎಂದು ವಾಕ್ಯ ಪೂರ್ತಿ ಮಾಡಿದಳು ..

12) ಉತ್ತರ ಪತ್ರಿಕೆಯ ಮೇಲೆ ಅಧ್ಯಾಪಕರ ಕೆಂಪು ಶಾಯಿಯಲ್ಲಿ ಬರೆದದ್ದು ಏನೆಂದು ತಿಳಿಯದೆ ಅವರನ್ನೇ ಹೋಗಿ ಕೇಳಿದ ಗುಂಡನಿಗೆ ಅಧ್ಯಾಪಕರು " ಅದಾ ?? ಅದು ಕೈಬರವಣಿಗೆ ಸ್ಫುಟ ಮತ್ತು ಸುಂದರವಾಗಿರಬೇಕು ಎಂದು ಬರೆದದ್ದು " ಎಂದರು .


13) ದಿನವೂ ಒಂದು ರುಪಾಯಿ ದಾನ ಮಾಡುತ್ತಿದ ಒಬ್ಬ ಭಿಕ್ಷುಕನಿಗೆ ಒಂದು ದಿನ ಕೊಡದೆ ಹೋದಾಗ ಅವನು " ಕೊಡದೆ ಇರುವ ಪುಣ್ಯಾತ್ಮರು ಹೇಗೂ ಕೊಡುವುದಿಲ್ಲ ಇವತ್ತು ಈ ಕೊಡುವ ಬ್ಯಾವರ್ಸಿಗೆ ಏನಾಯ್ತು ??? " ಎಂದು ಗೊಣಗಿದ .

14) ನನ್ನ ಒತ್ತಾಯದ ಕಾಟಾಚಾರಕ್ಕೆ ಲೇಖನ ಓದುವ ಓದುಗರು ನಂಬರ 11 ಇಲ್ಲದೆ ಇರುವುದನ್ನು ಗಮನಿಸಲೇ ಇಲ್ಲ .

Monday, July 20, 2009

ಶಾಂತಿಮಂತ್ರ

**********************************************************
ಈ ಲೇಖನವನ್ನು ಓದುವ ಮೊದಲು ನನ್ನ "ನಾನು - ನನ್ನ ಸಂಸಾರ " ಲೇಖನ ಓದಿದರೆ ಇದರ ಹಾಸ್ಯದ ಹಿನ್ನೆಲೆಯ ಕುರಿತು ತಿಳಿಯಬಹುದು .
http://shanuisking.blogspot.com/2009/03/blog-post_17.html
**********************************************************
ಊಫ್ .. ಈ ಜನಕ್ಕೆ ಯಾವ್ ಟೈಮ್ ನಲ್ಲಿ ಏನ್ ಮಾತಾಡ್ಬೇಕು ಅನ್ನೋದೇ ಗೊತ್ತಾಗಲ್ಲ ....ಇಷ್ಟು ದಿನ ನಾನು ಶಾಂತಿ ಬಗ್ಗೆ ಬರೆದ ಎಲ್ಲ ಲೇಖನಗಳನ್ನು ಅವಳಿಗೆ ತಿಳಿಯದಂತೆ ಸೇಫ್ ಲಾಕರನಲ್ಲಿ ಇಟ್ಟಿದ್ದೆ . ಮೊನ್ನೆ ಶನಿವಾರ ಸಂತೆಗೆ ಇವಳನ್ನು ಕರೆದುಕೊಂಡು ಹೋದಾಗ ಭಾದ್ರಪದ ಮಾಸ ಬರದಿದ್ದರೂ ಸಡನ್ನಾಗಿ ಗಣೇಶ ವಕ್ಕರಿಸಿಕೊಂಡು ಬಿಟ್ಟ . "ಏನ್ ಅತ್ತಿಗೆ ?? ನುಗ್ಗೆಕಾಯಿ ಖರೀದೀನಾ ??? ಎಂದು ಕೇಳಿ ಬಿಡೋದೇ ??. ನನ್ನ ಕಣ್ಸನ್ನೆ ನೋಡ್ತಾನೆ ಇಲ್ಲ ....... ಯಾಕೋ ಗಣೇಶ ಹೀಗೆ ಯಾಕೆ ಕೇಳ್ತಾ ಇದ್ದೀಯಾ ?? ಎಂದು ಇವಳು ಕೇಳಿದಾಗ ಮಗ್ಗಿ ಕಂಠಪಾಠ ಹೊಡೆದಂತೆ ನನ್ನ ಲೇಖನದ ಎಲ್ಲ ಜೋಕುಗಳನ್ನು ಕಕ್ಕಿಬಿಟ್ಟ ..... ಏನ್ ಚೆನ್ನಾಗಿ ಬರೆದಿದ್ದಾರೆ ನಿಮ್ ಮನೆಯವರು ಅಂತ ಹೊಗಳಿಕೆ ಬೇರೆ . ನನಗೆ ನಗುವುದೋ ಅಳುವುದೋ ತಿಳಿಯಲಿಲ್ಲ . ಸಾಯಂಕಾಲ ಮನೆಯಲ್ಲಿ ನನಗೆ ನಡೆದ ಸತ್ಯನಾರಾಯಣ ಪೂಜೆಯ ಬಗ್ಗೆ ಇನ್ಯಾವತ್ತಾದರೂ ಬರೆಯುತ್ತೇನೆ . ಈಗ ಮುನಿಸಿಕೊಂಡ ಶಾಂತಿಯನ್ನು ಒಲಿಸಿಕೊಳ್ಳಲು ಈ ಶಾಂತಿಮಂತ್ರ .....

*************** ಓಂ !!!!! *************
ಮೌನ ಮುರಿದು ಮಾತನಾಡು
ನಗುತ ನನ್ನ ನಲ್ಲೆ
ಮಾತು ಬಿಟ್ಟು ಕೊಲುವೆ ಏಕೆ
ನೀನು ಮೌನದಲ್ಲೇ ??

ಸಿಟ್ಟಲ್ಲಿ ಯಾಕೆ ಮಾಡ್ಕೊಂಡಿದ್ದಿ
ನೀನ್ ಮೂತೀನ್ ಉಬ್ಬಿದ ಪೂರಿ
ನಿನ್ನೆಯಿಂದ್ ಹೇಳ್ತಿದ್ದೀನಿ
I am very sorry !!!!

ಉಹೂ ಇಲ್ಲ ... ಆ ಲೈನು ಕೆಲಸ ಮಾಡಲಿಲ್ಲ . ಕಪಾಟಿನ ಬಟ್ಟೆಗಳು ಸೂಟ್ ಕೇಸ ಒಳಗಡೆ ನುಗ್ಗುತ್ತಿವೆ . ಅದರ ಮಧ್ಯೆ ಇವಳು ಕಣ್ಣೀರು ತುಂಬಿಕೊಂಡು ಹೇಳಿದಳು ...

ಆಗ್ಲಿ ಏನೂ ನಾಳೆ ನಾನು
ಹೋಗ್ತೀನಿ ಶಿವಮೊಗ್ಗೆ
ಆಮೇಲೆ ನೀನು ತಂದುಕೊಂಡು ತಿನ್ನು
ಸೌತೆ - ಗುಳ್ಳ- ನುಗ್ಗೆ !!

ಇರಲಿ ಬತ್ತಳಿಕೆಯ ಬೇರೆ ಅಸ್ತ್ರ ಪ್ರಯೋಗ ಮಾಡಬೇಕಾಯ್ತು . ಸ್ವಲ್ಪ ಬೆಣ್ಣೆ ಹಚ್ಚಿದರೆ ಒಲಿಯುತ್ತಾಳೋ ನೋಡೋಣ ಅಂದುಕೊಂಡು ಈ ಸೆಂಟಿ ಡೈಲಾಗು ಹೊಡೆದೆ .

ತವರಿಗೆ ಹೋಗ್ತೀನಂತ ಮಾತ್ರ
ಹೇಳ್ಬೇಡ್ವೆ ನನ್
ರಾಣಿ ನೀನಿಲ್ದೆ ಬದುಕೊದಿಲ್ವೇ
ಈ ನಿನ್ ಗಂಡ ಅನ್ನೋ ಪ್ರಾಣಿ

ಅಬ್ಬಾ ... ಪರಿಸ್ಥಿತಿ ಕರ್ಫ್ಯೂನಿಂದ ಸೆಕ್ಷನ್ ೧೪೪ ಗೆ ಇಳಿಯಿತು . ಈಗ ಸೃಷ್ಟಿಯಾಗಿದ್ದ ಉದ್ವಿಗ್ನ ವಾತಾವರಣ ಹತೋಟಿಯಲ್ಲಿ ಬಂತು , ಬಟ್ಟೆಗಳು ಸೂಟ್ ಕೇಸ ನಿಂದ ಕಪಾಟು ಸೇರಿಕೊಂಡವು . ಆದರೆ ಬೆಳಿಗ್ಗೆಯಿಂದ ಒಳಗಡೆ ಜಪ್ತಿಯಾಗಿದ್ದ ಸಿಟ್ಟು ಒಮ್ಮೆಲೇ ಹೊರಬಂದಿತು .

ಊಟಕ್ಕೆ ನಾನು ಬಡ್ಸೋದಿಲ್ಲ
ಅನ್ನದ ಒಂದೂ ಅಗುಳು
ಇಲ್ಲಿವರ್ಗೂ ನನ್ನನ್ ಬೈಕೊಂಡ್
ನೀನ್ ಏನೇನ್ ಬರೆದೆ ಬೊಗಳು

ಇಷ್ಟು ಹೇಳಿ ಮುಖ ತಿರುಗಿಸಿ ಮತ್ತೆ ಮೌನವೃತ ಧಾರಣೆ ಮಾಡಿದಳು ಹೆದರಿಬಿಟ್ಟೆ !!! ಕಣ್ಣಿನಲ್ಲಿ ಜ್ವಾಲಾಮುಖಿ .... ನವರಾತ್ರಿಗೆ 3 ತಿಂಗಳು ಇರಬೇಕಾದ್ರೆನೆ ನನಗೆ ದುರ್ಗೆಯ ದರ್ಶನ. ಇರಲಿ ಇವಳ ಸಿಟ್ಟು ನನಗೆ ಗೊತ್ತಿಲ್ವೆ ??? ನಾನು ಮುಂದುವರಿಸಿದೆ .

ಶಾಂತಿ ಅನ್ನೋ ಹೆಸರಿದ್ರೂ
ನಿನಗ್ಯಾಕೆ ಇಷ್ಟೊಂದು ಕೋಪ ??
ಚಿಕ್ಕ ಪುಟ್ಟ ವಿಷಯಕ್ಕೆ ಯಾಕೆ ತಾಳ್ತಿ
ಮಾಂಕಾಳಿ ಸ್ವರೂಪ ??

ಸ್ವಲ್ಪ ಮುಂಚೆ ಕೂಗ್ತಿದ್ದೆ
ಈಗ್ಯಾಕೆ ಸೈಲೆಂಟ್ ಮೋಡು??
ಇವತ್ತಿಂದ ನಿನಗಾಗಿ ನಾನ್
ಏನೇನ್ ಮಾಡ್ತೀನಿ ನೋಡು

ರನ್ನ ಚಿನ್ನ ಬಂಗಾರಾಂತ
ಪ್ರೀತಿಯಿಂದಲೇ ಕರೀತೀನಿ
"ನನ್ ಹೆಂಡ್ತಿ ನನ್ ಪ್ರಾಣ " ಅಂತ
ಹೊಸ ಲೇಖನ ಬರೀತೀನಿ

ಉಪ್ಪೇ ಹಾಕದ ಉಪ್ಪಿಟ್
ಕೊಟ್ರು ಚಪ್ಪರಿಸ್ಕೊಂದು ತಿಂತೀನಿ
ಬೆಲ್ಲದ ನೀರಿಗೆ ಪಾಯಸ ಅಂದ್ರೂ
ಸೂಪರ್ ಅಂತ್ಲೇ ಅಂತೀನಿ

ಕಣ್ಣ ಸನ್ನೇಲೆ ಕುಣೀತೀನಿ
ನಾನ್ ನಿನ್ನ ಎಲ್ಲ ತಾಳಕ್ಕೂ
ಕಣ್ಣೀರ್ ಹಾಕದೆ ತಿಂತೀನಿ
ನೀ ಮಾಡಿದ ಪನ್ನೀರ್ ಪಾಲಕ್ಕು

ಮೈಸೂರ್ ಮಲ್ಲಿಗೆ ನಿತ್ಯ ತಂದು
ನಾ ನಿನ್ ತಲೆಗೆ ಮುಡಿಸ್ತೀನಿ
ಎಲ್ಲ ಹಬ್ಬಕ್ಕೂ ರೇಷ್ಮೆ ಸೀರೆ
ತಪ್ಪದೆ ನಾನು ಕೊಡಿಸ್ತೀನಿ

ಸಡನ್ನಾಗಿ ಇವಳಿಗೆ ಗಣೇಶನ ಮಾತುಗಳೆಲ್ಲ ನೆನಪಿಗೆ ಬಂದವೋ ಏನೋ ... ಮತ್ತೆ ಶುರು ಹಚ್ಚಿಕೊಂಡಳು

ಡ್ರೈವಿಂಗ್ ಬಗ್ಗೆ ಬರ್ದಿರೋದು
ನಂಗೆ ಚೆನ್ನಾಗಿ ಗೊತ್ತು
ಟ್ರಾಫಿಕ್ ಪೋಲಿಸ್ ಮಗಳನ್ನೇ
ನೀವ್ ಹುಡ್ಕೊಬೇಕಾಗಿತ್ತು .

ಟ್ರಾಫಿಕ್ ಪೋಲಿಸ್ ಮಗಳನ್ನ
ನಾನು ತುಂಬಾ ಪ್ರೀತಿಸ್ತಿದ್ದೆ
ನನ್ ಗ್ರಹಚಾರ ಹಾಳಾಗಿತ್ತು
ನೀನ್ ಬಂದು ನಂಗೆ ಗಂಟು ಬಿದ್ದೆ

ಅನ್ನೋಣ ಎಂದುಕೊಂಡೆ ಆಮೇಲೆ ತಮಾಷೆ ಹೆಚ್ಚಾಗಿ ಪರಿಸ್ಥಿತಿ ವಿಕೋಪಕ್ಕೆ ತಿರುಗಿದರೆ ಕಷ್ಟ ಎಂದುಕೊಂಡು ಈ ಕವನ ಮತ್ತು ಉಕ್ಕಿ ಬರುತ್ತಿದ್ದ ನಗುವನ್ನು ತಡೆದುಕೊಂಡು ಕೆಳಗಿನ ಸಾಲುಗಳನ್ನು ಹೇಳಿದೆ .

ನನಗೂ ನಿನಗೂ ಸೆಟ್ ಆಗೈತೆ
ಏಳೇಳು ಜನ್ಮದ ನಂಟು
offer expire ಆಗಲಿಕ್ಕೆ
ಇನ್ನೂ ಆರು ಜನ್ಮ ಉಂಟು !!

ಅಬ್ಬ !!! ತುಟಿಯಂಚಿನಲ್ಲಿ ಅಪ್ರಯತ್ನವಾಗಿ ಮುಗುಳ್ನಗು ಮಿಂಚಿ ಮರೆಯಾಯಿತು. ಪುನಃ ಸಿಟ್ಟಿನ ನಾಟಕ ಮಾಡತೊಡಗಿದಳು . ನಮ್ಮ ದೇವರ ಬುದ್ಧಿ ನಮಗೆ ಗೊತ್ತಿಲ್ವೆ ??? ಕಬ್ಬಿಣದಂತೆ ಇವಳ ಮುಖ ಕೂಡ ಕೆಂಪಾಗಿದೆ ಒಂದೆರಡು ಪ್ರೀತಿಯ ಮಾತಿನ ಪೆಟ್ಟು ಸಾಕಾಗುತ್ತದೆ ಎಂಬುದನ್ನು ಮನಗಂಡು ಡೈಲಾಗುಗಳನ್ನು ಮುಂದರಿಸಿದೆ.

ನಗಲು ನೀನು ಮರೆಯುವೆ ನಾನು
ಇರುವ ಎಲ್ಲ ನೋವು
ನಿನ್ನ ನಗುವೇ ನನ್ನ ಎದೆಗೆ
ಝಂಡು ಬಾಮು ಮುವೂ (moov )

ನಾನೂ ನಿಂಗೆ ಪ್ರಾಣ ಅನ್ನೋ
ಸತ್ಯಾನ್ನ ನೀನು ಒಪ್ಪಿಕೊ
ಸಿಟ್ಟನ್ ಬಿಟ್ಟು ಮುತ್ತ ನ್ ಕೊಟ್ಟು
ಒಮ್ಮೆ ನನ್ನನ್ನ ಅಪ್ಪಿಕೋ !!! :)

ಇಷ್ಟು ಹೇಳುತ್ತಲೇ ನಾಚಿ ನೀರಾಗಿ ನನ್ನವಳು slow motion ನಲ್ಲಿ ನನ್ನ ಬಳಿ ಬಂದಳು . ರೀ ..... ಏನೇ ಹೇಳಿ ಆರ್ಟಿಕಲ್ಲು ಚೆನ್ನಾಗಿತ್ತು . ನೀವು ಆಚೆ ಹೋದಾಗ ಮನಸ್ಸು ತುಂಬಿ ನಕ್ಕುಬಿಟ್ಟೆ ಅಂದಾಗ ನನ್ನ ಲೇಖನಕ್ಕೆ ಜ್ಞಾನಪೀಠ ಪ್ರಶಸ್ತಿ ಸಿಕ್ಕಷ್ಟು ಸಂತೋಷವಾಯಿತು . ಹೀಗೆ ನನ್ನ ಸಮಸ್ಯೆ ದೂರವಾಯಿತು . ಒಂದು ನಿಮಿಷ ತಡೀರಿ ಈ ಗಣೇಶನ ಕುಶಲೋಪಚಾರ ಮಾಡಿ ಬರುತ್ತೇನೆ

*************** ಓಂ ಶಾಂತಿ ಶಾಂತಿ ಶಾಂತಿಃ******************** ****************************ವಿಕಟಕವಿ ********************